October 23, 2008

ವಿಚಿತ್ರಾನ್ನ ಸವಿಯುವಾಗ ಹೀಗೆನಿಸುತ್ತದೆ...

ಯಾರಾದರೂ ಚಿತ್ರಾನ್ನದ ಬಗ್ಗೆ ಮಾತನಾಡುತ್ತ  ಪನ್ ಡಿತರು ಅಂದರೆ ತಕ್ಷಣ  ನೆನಪಿಗೆ ಬರುವ ವ್ಯಕ್ತಿ ನಮ್ಮ ನಿಮ್ಮೆಲ್ಲರ ಪ್ರೀತಿಗೆ, ಅಭಿಮಾನಕ್ಕೆ ಪಾತ್ರರಾದ ಶ್ರೀವತ್ಸ ಜೋಶಿಯವರಲ್ಲವೇ! ಖಂಡಿತ ಈಗ ಪ್ರಸ್ತಾಪಿಸಬಯಸುತ್ತಿರುವುದೂ ಅವರ ಬಗ್ಗೇಯೇ. ಪ್ರೀತಿಯಿಂದ, ಅಭಿಮಾನದಿಂದ, ಗೌರವದಿಂದ ನೀವೆಷ್ಟೇ ತಲೆತಿಂದರೂ ಬೇಸರಿಸಿಕೊಳ್ಳದ ಜೋಶಿಯವರು ನಮ್ಮ ಕಾಲೆಳೆದು ನಗಿಸಬಲ್ಲವರು.  ‘ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ’ ಅಂತ ಹಾಡುತ್ತ ಬೇಸರಿಸಿಕೊಂಡು ಕುಳಿತಿದ್ದ ಪಕ್ಷ ಜೋಶಿಯವರು ನಿಮಗೆ ಮಾತಿಗೆ ಸಿಕ್ಕಿದ್ದೇ ಆದಲ್ಲಿ ಅದು  ಭಾಗ್ಯವೆಂದೇ ಹೇಳಬೇಕು. ನಕ್ಕು ನಗಿಸಿ ಭ್ರಮೆಯಿಂದ ಭುವಿಗೆ ತಂದಿಳಿಸುವ ಚಾಕಚಕ್ಯತೆ ಅವರಲ್ಲಿದೆ.

ಜೋಶಿಯವರು ಉತ್ಸಾಹದ ಚಿಲುಮೆಯಂತೆ ಎಂಬುದನ್ನು  ಹೊಸದಾಗಿ ಹೇಳಬೇಕಾಗಿಲ್ಲ.  ಅನಿವಾಸಿ ಕನ್ನಡಿಗರಿಗೂ ಸಹ  ಸುಲುಭ ಲಭ್ಯವಾದ ಅತ್ಮೀಯಇ-ಪತ್ರಿಕೆಯಾದ ದಟ್ಸ್ ಕನ್ನಡದಲ್ಲಿ ‘ವಿಚಿತ್ರಾನ್ನ’ಪಾತ್ರೆಯ ಒಡೆಯರಾಗಿಯೂ,  ನಮ್ಮ ನಿಮ್ಮೆಲ್ಲರ ನೆಚ್ಚಿನ ದಿನಪತ್ರಿಕೆಗಳಲ್ಲೊಂದಾದ ವಿಜಯ ಕರ್ನಾಟಕದ ‘ಪರಾಗ ಸ್ಪರ್ಶ’ ಅಂಕಣದ ಯಜಮಾನರಾಗಿಯೂ  ಜೋಶಿಯವರು ಚಿರಪರಿಚಿತರು.  ಸಹನಾಮಯಿಯಾದ ಜೋಶಿಯವರು  ಸಹನಾಮಯಿ ಸಹಾನಾರವರ ಮನದೊಡೆಯರು ಸಹ. ಸೃಜನಶೀಲರಾದ ಇವರು ಸೃಜನ್ ಅವರ ಪಿತೃದೇವ ಹಾಗೂ ನಮ್ಮಂಥ ಅನೇಕಾನೇಕ ಓದುಗರ ಅಭಿಮಾನಕ್ಕೆ ಪಾತ್ರರಾದವರು.  ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ  ವೃತ್ತಿಯಲ್ಲಿದ್ದೂ  ‘ವಿಚಿತ್ರಾನ್ನ’ವನ್ನು ಸತತ ಐದುವರ್ಷಗಳಕಾಲ ಪ್ರತಿಮಂಗಳವಾರ ದಟ್ಸ್ ಕನ್ನಡ ಓದುಗರಿಗೆ ಉಣಬಡಿಸಿ ‘ವಿಚಿತ್ರಾನ್ನದಾತಾ ಸುಖೀಭವ’ ಎನಿಸಿಕೊಂಡವರು. ಕಂಪ್ಯೂಟರಿನ ಹಾಳೆಗಳಲ್ಲಿ ಮಾತ್ರ ಲಭ್ಯವಾಗಿದ್ದ ‘ವಿಚಿತ್ರಾನ್ನ’ ಇದೀಗ ಪುಸ್ತಕ ರೂಪದಲ್ಲಿಯೂ ಲಭ್ಯವಿರುವುದು ನಮ್ಮೆಲ್ಲರ ಭಾಗ್ಯ. ‘ಮತ್ತೊಂದಿಷ್ಟು ವಿಚಿತ್ರಾನ್ನ’ಮತ್ತು  ‘ಇನ್ನೊಂದಿಷ್ಟು ವಿಚಿತ್ರಾನ್ನ’ಒಂದಾದ ಮೇಲೆ ಒಂದನ್ನು ಸವಿಯಬಹುದಾದ  ಬುತ್ತಿಯನ್ನದ ಎರಡು ಪಾತ್ರೆಗಳು.


‘ವಿಚಿತ್ರಾನ್ನ’ವನ್ನು  ದಿನಕ್ಕೊಂದು ಕಥೆಯಂತೆ ಓದುತ್ತಿರುತ್ತೇನೆ. ಇವು ನೀತಿಕಥೆಗಳ ಹಾಗಿರದಿದ್ದರೂ ಮಾಹಿತಿಕತೆಗಳಂತೆ ವಿಜೃಂಭಿಸುತ್ತವೆ.  ಹೀಗೇ  ಕುಳಿತಿದ್ದಾಗ  ಹಸಿವಾದರೆ ಕೆಲವೊಮ್ಮೆ ನನ್ನಿಷ್ಟದ ಖಾದ್ಯವಾದ ಚಿತ್ರಾನ್ನದ ನೆನಪಾದಾಗ ಚಿತ್ರಾನ್ನವನ್ನ ಪಾಕಿಸಿ ತಿನ್ನಲು ಸೋಮಾರಿಯಾಗಿ ಕುಳಿತಾಗಲೂ ಜೋಶಿಯವರ ‘ವಿಚಿತ್ರಾನ್ನ’ವೇ ನನ್ನ ಸಹಾಯಕ್ಕೆ ಬರುವುದು.  ನವಿರು ಹಾಸ್ಯ ಚಟಾಕಿಗಳನ್ನೊಳಗೊಂಡ ಜೋಶಿಯವರ ಲೇಖನಗಳು ತುಂಬು ಲವಲವಿಕೆಯಿಂದ ಸಾಗುತ್ತ ಮಾಹಿತಿ ಒದಗಿಸುತ್ತ ಹೋಗುವ ರೀತಿ ಓದುಗರನ್ನು ಸಂತೃಪ್ತಗೊಳಿಸುತ್ತದೆ. ಕೆಲವೆಡೆ ವಿಚಿತ್ರಾನ್ನ ತನ್ನದೇ ಪರಿಮಳವನ್ನು ಹೊಂದಿದ ರುಚಿಯಾದ  ಗಂಜಿಯಷ್ಟು ಸರಳವಾಗಿಯೂ ನಮ್ಮನ್ನು ತಂಪಾಗಿಸುತ್ತದೆ. ಇನ್ನು ಕೆಲವೆಡೆ ಬಂಗಾರಬಣ್ಣಕೆ ಹುರಿದ  ಕಡಲೆಬೇಳೆ ಎನ್ನಿಸಿದರೂ ಸ್ವಲ್ಪ ಅಗಿದು ತಿನ್ನುವವರಿಗೆ ಅದರ ಸ್ವಾದದ ಹಿತವೇ ಬೇರೆ. ‘ವಿಚಿತ್ರಾನ್ನ’ ಬರಿಯ ಒಗ್ಗರಣೆ ಅನ್ನವಾಗಿ ಯಾವತ್ತೂ ಅನ್ನಿಸುವುದೇ ಇಲ್ಲ. ಬೇರೆ ಬೇರೆ ಪ್ರದೇಶಗಳ, ರಾಜ್ಯಗಳ, ನಾಡುಗಳ, ಗ್ರಹಗಳಿಂದ ತಂದ ಉತ್ತಮ ಖಾದ್ಯ ಸಲಕರಣೆ(ವಿಷಯ)ಗಳನ್ನೆಲ್ಲ ಬಳಸಿ ತಯಾರಾದ ಪೌಷ್ಟಿಕ ಖಾದ್ಯವಾಗಿ  ಪರಿಣಾಮ ಬೀರುತ್ತದೆ . 

‘ವಿಚಿತ್ರಾನ್ನ’ ಪುಸ್ತಕ ರೂಪದಲ್ಲಿ ಲಭ್ಯವಿರುವ ವಿಚಾರಕ್ಕೆ ಶ್ರೀವತ್ಸ ಜೋಶಿಯವರನ್ನು ಅಭಿನಂದಿಸುವ ಮೊದಲಿಗೆ ‘ವಿಚಿತ್ರಾನ್ನ’ವನ್ನು ಪುಸ್ತಕರೂಪದಲ್ಲಿಯೂ ಹಾಗೂ ಇ ರೂಪದಲ್ಲಿಯೂ ನಮ್ಮ ಕೈಗೆಟಕುವಂತೆ ಅನುಗ್ರಹಿಸಿರುವದಕ್ಕಾಗಿ ಧನ್ಯವಾದ ಹೇಳಲೇಬೇಕು.     ‘ವಿಚಿತ್ರಾನ್ನ’ಪುಸ್ತಕರೂಪದಲ್ಲಿ ಲಭ್ಯವಿರುವಂಥಹ ಸಿಹಿಸುದ್ದಿಯು ಈಗಾಗಲೇ ನಮಗೆಲ್ಲ ಗೊತ್ತಿರುವಂತದ್ದೇ.  ಪುಸ್ತಕ ರೂಪದಲ್ಲಿ  ‘ವಿಚಿತ್ರಾನ್ನ’ಲಭ್ಯವಿರುವುದರಿಂದ  ಬೇಕಾದ ತಾಣದಲ್ಲಿ ಕುಳಿತು ಅಥವಾ ನಿಂತು ಅದರ ಸವಿಯನ್ನು  ಸವಿಯಬಹುದಾಗಿದೆ. ‘ವಿಚಿತ್ರಾನ್ನ’ ಪುಸ್ತಕ ಲಭ್ಯವಿದೆಯಾ, ಹಾಗಾದರೆ ಇವತ್ತೇ ಕೊಂಡುತಂದು ಆರಾಮವಾಗಿ ಮಲಗಿಕೊಂಡು ಓದಿಬಿಡುತ್ತೇನೆ’ ಅಂತ  ಮಲಗಿಕೊಂಡು ‘ವಿಚಿತ್ರಾನ್ನ’ ಸವಿಯುವಾಗ ಗಂಟಲಲ್ಲಿ ಸಿಕ್ಕೀತಾದರೆ ನನ್ನನ್ನು ನೀವು ಬೈದಲ್ಲಿ ಅದಕ್ಕೆ ನಾನು ಜವಾಬ್ಧಾರಳಲ್ಲ.  ವಿಚಿತ್ರಾನ್ನವು ತದೇಕಚಿತ್ತರಾಗಿ ಕುಳಿತು ಓದುವವರ ಮಿದುಳನ್ನೂ ಮನಸನ್ನೂ ತುಂಬಿಸಿ ಹಸಿವೆಯನ್ನು ಮರೆಸಬಲ್ಲಂತಹುದಾಗಿದೆಯೇ ಹೊರತು ಆಲಸಿಯಾಗಿ ಮಲಗಿ ನಿದ್ರೆತಂದುಕೊಳ್ಳುವುದಕ್ಕಾಗಿ ಓದುವ ಪುಟಗಳನ್ನು ಹೊಂದಿಲ್ಲ. ಅರ್ಥೈಸಿಕೊಳ್ಳುವಂಥಹ, ಆಳವಡಿಸಿಕೊಳ್ಳುವಂಥಹ ವಿಚಾರಧಾರೆಗಳಿಗಿಲ್ಲಿ ಖಂಡಿತ ಕೊರತೆಯಿಲ್ಲ. ಪರಧ್ಯಾನತೆಯಿಂದ ಓದಿದರೂ  ಅರ್ಥವಾಗಿಬಿಡುವಂತೆ ಹೆಣೆದ ದಿಢೀರ್ ಇಷ್ಟವಾಗುವ ಕಥೆಪುಸ್ತಕ ‘ವಿಚಿತ್ರಾನ್ನ’ಅಲ್ಲವೆನ್ನುವುದೂ ಅಷ್ಟೇ ಸತ್ಯ. ಓದುತ್ತ ಓದುತ್ತ ಓದಿಸಿಕೊಂಡು ಆಪ್ತವಾಗುವ ಅಂಕಣಮಾಲೆಯಿದು.   ಜಗತ್ತಿನ ಹಲವು ವಿಚಾರಧಾರೆಗಳ ಹೊತ್ತ ನದಿ, ಮಾಹಿತಿಗಳ ಸರೋವರವೆಂದರೆ ತಪ್ಪಾಗಲಾರದು.     
ಇಂತಹ ‘ವಿಚಿತ್ರಾನ್ನ’ವನ್ನು ನೀವೂ ಸವಿದಿರುತ್ತೀರಿ. ಅಥವಾ ಸವಿಯಬೇಕೆನಿಸಿದ ಪಕ್ಷ ಹೆಚ್ಚಿನ ಮಾಹಿತಿಗಾಗಿ srivathsajoshi@yahoo.com ವಿಳಾಸಕ್ಕೆ ಪ್ರೀತಿಯಿಂದ ಒಂದು ಪತ್ರ ಬರೆಯಿರಿ.  ಪ್ರೀತಿಯಿಂದ ಪ್ರತಿಕ್ರಿಯಿಸುತ್ತಾರೆ.  


‘ವಿಚಿತ್ರಾನ್ನ’ ಓದುಗರ ಮಿದುಳನ್ನ ಸಾಣೆಹಿಡಿದು ಚುರುಕಾಗಿಸಬಲ್ಲುದು, ಹೊಳಪಾಗಿಸಬಲ್ಲುದು.  ಓದುತ್ತ ಓದುತ್ತ ಮನವನ್ನು ಪ್ರಸನ್ನಗೊಳಿಸಬಲ್ಲ ಅಂಕಣಮಾಲೆಯಿದು ಎನ್ನಿಸದೇ ಇರಲಾರದು.  ಓದುತ್ತ ಓದುತ್ತ ಹಲವಾರು ಕಂಡು ಕೇಳರಿಯದ ವಿಷಯಗಳನ್ನೆಲ್ಲ ಕಾಣುತ್ತ ಹೋಗುತ್ತೇವೆ ನಾವಿಲ್ಲಿ. ಜೊತೆ ಜೊತೆಗೆ ಈ ಎಲ್ಲ ವಿಚಾರಧಾರೆಗಳನ್ನ ಹೆಣೆದ ರಚನೆಕಾರರ ಬೌದ್ಧಿಕ ಕುಶಲತೆ ನಮ್ಮನ್ನು ಚಕಿತರನ್ನಾಗಿಸುತ್ತದೆ, ಯೋಚನೆಗೆ ತಳ್ಳುತ್ತದೆ. ಜೋಶಿಯವರ ಸೃಜನಶೀಲತೆ ಬೆರಗುಗೊಳಿಸುತ್ತದೆ.  ಹುಟ್ಟುತ್ತಿರುವ ಸೂರ್ಯನ ಎಳೆಬೆಳಕನ್ನೂ, ಮುಳುಗುವ ಸೂರ್ಯನ ರಂಗನ್ನೂ, ಮುಸ್ಸಂಜೆಯ ತಂಗಾಳಿಯ ಬಾಹ್ಯಸೊಬಗನ್ನು ಸವಿಯುವವರಿಗೂ, ಅವುಗಳ ಆಂತರ್ಯ ಅರಸುವವರಿಗೂ, ಅವುಗಳಿಗೆಲ್ಲ ಮೂಲಹುಡುಕುವವರಿಗೆ,  ಎಳೆಬೆಳಕಿನ ಎಳೆಯ ಜಾಡು ಅರಸುವವರಿಗೆ, ರಂಗಿನ ರಚನೆಗಳ ಅರಿಯಬೇಕೆನಿಸಿದವರಿಗೆ, ತಂಗಾಳಿಬೀಸುವ ದಿಕ್ಕಿಗೊಂದು ಕಾರಣ ಕೇಳುವವರನ್ನು,  ಜಗತ್ತಿನ ಹೊಸ ಹೊಸ ವಿಚಾರಗಳನ್ನೂ ನಮ್ಮದೇ ಭಾಷೆಯೊಳಗೆ ಕಂಡುಕೊಳ್ಳಹೊರಟಿರುವವರಿಗೆಲ್ಲರಿಗೂ  ದಾರಿಯಾಗುತ್ತದೆ ‘ವಿಚಿತ್ರಾನ್ನ’.  ನಾವೆಲ್ಲ ಓದಿ ಅರ್ಥೈಸಿಕೊಳ್ಳಬೇಕಾದ್ದು, ಆಳವಡಿಸಿಕೊಳ್ಳಬೇಕಾದವುಗಳೆಲ್ಲವುಗಳ ಮಾಹಿತಿ ಮಾಲೆಯೇ ‘ವಿಚಿತ್ರಾನ್ನ’ವೆಂದರೆ ಖಂಡಿತವಾಗಿಯೂ ಉತ್ಪ್ರೇಕ್ಷೆಯೆನಿಸಲಾರದು. ‘ವಿಚಿತ್ರಾನ್ನ’ವನ್ನು ಓದಿ ನೋಡಿದಾಗಲೇ ಅರಿವಾಗುವುದು ಪ್ರಾಪಂಚಿಕ ಭಾವಗಳ ಹಾದಿಯಲ್ಲಿ ಮಾಹಿತಿಕೇಂದ್ರಕ್ಕೆ ತಲುಪಿದ್ದೇವೆ ಎಂಬುದು.

  

  

October 22, 2008

ಕಳೆದು ಹೋಗುತ್ತಿದ್ದೇನೆ

ಪ್ರತಿಕಾರ್ಯಕೂ ಗೆರೆಯಿತ್ತು
ಮಾತು ಮಾತಿಗೂ ಗದರಿ
ಕಣ್ಣಲ್ಲಿ ಪ್ರೀತಿ ಹರಿಸಿ
 ನನ್ನ ತಬ್ಬಿದ್ದವಳ ಮಡಿಲಸೆರೆ ಬಿಡಿಸಿ
ಪ್ರಪಂಚದೆಡೆ ದಾರಿ ತೋರಿದ
ಅಪ್ಪನ ಅಕ್ಕರೆಯಡಿ ತೋಯ್ದು
ಕರಗಿ ಹೋಗುತ್ತಿರುವೆನೇನು ಕಳೆದು!

ಹಾಗಿತ್ತು ಹೀಗಿತ್ತು ಒಂದು ಮತ್ತೊಂದು
ಹೀಗೆ ಹಾಗೆಲ್ಲ ಇತ್ತೊಮ್ಮೆ ಹಿಂದೆ
ಕಷ್ಟ-ಕಾರ್ಪಣ್ಯ ಮಡಿ-ಶಾಸ್ತ್ರಕೆ
ಒಗ್ಗಿ ತಗ್ಗಿ ಬಗ್ಗಿದ್ದವರು ನಾವು
ಎನ್ನುತ್ತಲೇ ತನ್ನದೆಲ್ಲವ ಝಾಡಿಸಿ
ವಿಮಾನದ ಈ ಯುಗಕೂ ತನ್ನೆಲ್ಲವ ರೂಢಿಸಿಕೊಂಡ
ಅಪ್ಪಟ ಕಲಿಯುಗದ ಅಜ್ಜಿಯ
ವಾತ್ಸಲ್ಯದ ಹಾಸಿಗೆಯಲಿ ನಿದ್ರಿಸಿ
ನಿದ್ದೆಯಾಗಿ ಹೋಗುತ್ತಿದ್ದೇನೆಯೇ ಕಳೆದು!

ಗಡಿಬಿಡಿಯ ಅಡುಗೆಯಲೂ
ನೆನಪಾದ ಅಂಗಳದ ಗಡಿಗೆಯ ಹೂಗಿಡ
ಗುನುಗುನು ಹಾಡುತ್ತ ಹೆಣೆದ ಅರ್ಧಂಬರ್ಧ ಶಾಲು
ಒಲೆಯ ಮೇಲಿನ ಹಾಲು
ನೆಲವ ಕಂಡದ್ದನ್ನು
ಆಚೆಮನೆಯವಳಿಗೂ ಹೇಳಿ ನಕ್ಕು
ಈಚೆ ಸರಿದಾಗ ಕಂಡ ಮಗನ ಮುದ್ದಿಸಿ
ಕೊಂಚ ತಡವಾದರೂ ಕಾಯುತ್ತ ನನ್ನ
ಕಂಡಾಗ ಕಿರುನಕ್ಕು ನಿಡುಸುಯ್ವ ಅಮ್ಮನ
ಮಮತೆಯಾಳದಿ ಇಳಿದು
ಹುಗಿದು ಹೋಗುತ್ತಿದ್ದೇನೆಯೇ ಕಳೆದು!

ಯಾವತ್ತೋ ಬರೆದದ್ದು, ಆವತ್ತು ಹೀಗೆಯೇ ಅವರೆಲ್ಲರ ನಡು ಕಳೆದುಹೋಗಿದ್ದೆ, ಇವತ್ತು ಈ ಸಾಲುಗಳೆಲ್ಲ ನನ್ನೊಳಗೆ ಕಳೆದುಹೋಗಿವೆ.

October 19, 2008

ಬಾಡಿಗೆಮನೆ ಬದಲಾವಣೆ

ಬದಲಾಗಿದೆ ಚಂದಿರನ ಮನೆ
ಬೆಳದಿಂಗಳ ವಿಳಾಸ ಕೂಡ
ಬದಲಾಗದ ದೂರವಾಣಿ 
ಸನಿಹವಿರದು
ಇಲ್ಲದ ಕೊಂಡಿನಂಟು

ದೂರವಾಣಿ ಅಂಕೆ ಸಂಖ್ಯೆ
ಹತ್ತು ಎಂದರೆ ಇಳಿಯುವುದಿಲ್ಲ
ಅಂತರ್ಜಾಲದ ಜಾಲ ಸಲೀಸಾಗಿ ಸಿಗದೆ 
ಏಳು ಹನ್ನೊಂದು
ಹನ್ನೆರಡನೆಯ ದಿನ ಮನೆಮಂದಿಗೆಲ್ಲ ದುಃಖ

ಜಾಡ ಜಾಳಿಗೆಗಳು
ಮಾಯ ಮತ್ತು ಮಂತ್ರ
ಖಾಲಿ ಗೂಡಿನ ಮೂಲೆಯಲಿ
ವಿಳಾಸ ಬೇಕಿರದ
ಪರಿಮಳದ ಶುಚಿಪತ್ರ(ಪತ್ರೆ)

ಬಿಟ್ಟ ಸ್ಥಳ ತುಂಬಿದ್ದೇವೆ
ಎಲ್ಲ ತುಂಬಿದ್ದರೂ ಖಾಲಿ ಜಾಗ
ಬಿಟ್ಟ ಸ್ಥಳ ತುಂಬಿ ತುಂಬಿ
ಅಲ್ಲಿ ಬಿಟ್ಟುಹೋಗುತ್ತದೆ ಸ್ಥಳ
ಇಲ್ಲಿ ತುಂಬಿದಷ್ಟೂ


ತರಕಾರಿ ಸಂತೆಯಲಿ ಸಿಕ್ಕ
ಅಪರಿಚಿತರು 
ಪಕ್ಕದ ಕಿಟಕಿ-ಬಾಗಿಲುಗಳಲೇ 
ಎದುರಾಗಿ ಮುಗುಳ್ನಗುತ್ತೇನೆ
ತುಟಿಬದಿಗಳು ಸುಸ್ತಾಗುವತನಕ

ಸಧ್ಯಕ್ಕೆ ಮನಸಿಲ್ಲ ಮಾತಾಡುವುದಕ್ಕೆ
ಅರ್ಥವಾಗುವತನಕ ಒಣಜಂಭ
ಅರಿತಾದ ಮೇಲೆ ಅಡಕೇಳಲು ಮೌನವ 
ಬಂದೇ ಬರುತ್ತಾರೆ
ಎಷ್ಟೆಂದರೂ ಅಕ್ಕಪಕ್ಕ ನೆರೆಹೊರೆಯವರಲ್ಲವೆ!

ನಿದ್ರೆ ಹಾಡುತ್ತದೆ
‘ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ’
ಒಂದೇ ಸಮಹಠ ನಿದ್ರೆಯದು
ನಿದ್ರಿಸುತ್ತಿಲ್ಲ ನಿದ್ರೆ
ಅಳುತ್ತಲೆ ಇದೆ

‘ಮನೆಗೆ ಹೋಗೋಣ ಮನೆಗೆ ಹೋಗೋಣ’
ಬೆಚ್ಚಿಬಿದ್ದು ಎದ್ದುಕುಳಿತ ನಿದ್ರೆಗೆ
ಬುದ್ಧಿಹೇಳುತ್ತೇನೆ
ನಾವಿರುವುದೇ ನಮ್ಮನೆ, ಇಲ್ಲಿ ಎಲ್ಲವೂ ನಮ್ಮದೇ...
ಮತ್ತು ಯಾವುದೂ ನಮ್ಮದಲ್ಲ

ಇಲ್ಲಿ ಕಾವಲಿಗೆ ನಾವಿದ್ದೇವೆ
ಅಲ್ಲಿ ಬೀಗ ಎಲ್ಲವನೂ ಕಾಯುತ್ತದೆ
ನಮಗೆಷ್ಟೊಂದು ಮನೆಗಳು!
ಬಾಡಿಗೆಯದಾದರೂ
ಬದಲಾಯಿಸುವಷ್ಟು! 

ಅವರಿಗೆ....
ಮನೆಯೇ ಇಲ್ಲ
ಅದಕಾಗಿ
ಬದಲಾಯಿಸುತಲಿದ್ದಾರೆ
ರಸ್ತೆಯಂಚುಗಳನೇ...

[ಕಳೆದ ಶುಕ್ರವಾರ ಮನೆ ಬದಲಾಯಿಸಿದೆವು,  ಮನದ ಮಾತುಗಳೆಲ್ಲ ನಿಮ್ಮ ಮುಂದಿಲ್ಲಿ ಸಾಲುಗಳಾಗಿವೆ. ]


October 15, 2008

ಅರಿವಿಗೇನರಿವು...

ಕುಂಚಕರಿವಿಹುದೆ ತಾ ಬಳಿವ ಬಣ್ಣದ್ದು
ಹರಿವ ಜಲಕೇನರಿವು ತನ್ನಂಚೆ ವಿಳಾಸ
ಆಗಸವು ಅರಿತಿಹುದೆ ತನ್ನಾದಿ ಅಂತ್ಯವನು
ನಿನಗೆ ಅರಿವಿತ್ತೆ ಈ ಹೊಸಿಲು ನಿನದೆಂದು

ಮೊಗ್ಗರಿತು ಅರಳುವುದೆ ಹೂವಾಗಿ ತಾನು
ಮೊಳಕೆಗೇನರಿವು ತಾನೊಂದು ಎಲೆಯೆಂದು
ಸಸಿಗೆ ಅರಿವಿಹುದೇ ನಾಳೆ ತಾ ಮರವೆಂದು
ಹುಟ್ಟು ತಾ ಹುಟ್ಟುವುದೆ ಮರಣವನು ಅರಿತು


ಬತ್ತಿಗರಿವಿಹುದೆ ತಾ ಬೆಳಗುತಿಹೆನೆಂದು
ತೈಲಕೇನರಿವು ದೀಪವೇ ತಾನೆಂದು
ಮೌನ ಅರಿತಿಹುದೆ ತನ್ನರ್ಥವೇನೆಂದು
ಮಾತರಿತು ಮುಗಿವುದೇ ಮೌನ ತಾನೆಂದು

ಸತ್ಯಕ್ಕೆ ಅರಿವಿಹುದೆ ತಾನೊಂದು ಸುಳ್ಳೆಂದು
ಸುಳ್ಳಿಗೇನರಿವು ಶೂನ್ಯ ತಾನೆಂದು
ಆಳಕ್ಕೆ ಅರಿವಿಹುದೆ ತನ್ನೆತ್ತರದ ಮಿತಿ
ಎತ್ತರವು ಅಳೆಯುವುದೆ ತನ್ನಾಳವನ್ನು

ನಿನಗರಿವೆ ನಿನ್ನರ್ಥಕೆ ಅರ್ಥವೇನೆಂದು
ಇಂದುನಾಳೆಗಳಂಚಿಗೆ ಹೆಸರು ಏನೆಂದು
ಅನಂತಕೂ ಅಂತ್ಯವೊಂದಿರಲೇಬೇಕು
ಪ್ರತಿ ಅಂತ್ಯಕೂ ಆದಿಯೊಂದಿರಲೇಬೇಕು

October 9, 2008

ಕುಂಚಕೇನರಿವು ಹಿನ್ನೆಲೆಯ ರಂಗಿನದು...

‘ಕೋಪವಾ?’ ಅಂದವನ ಮಾತಿಗೆ ಮೌನದಲ್ಲಿಯೇ ನಕ್ಕು ಸುಮ್ಮನಾಗಿದ್ದೇನೆ.
‘ನಿನ್ನೊಳಗೇನೋ ನೋವಿದೆ, ಹೇಳುತ್ತಿಲ್ಲ ’ ಅಂದವನ ಮಾತಿಗೆ ನಿಧಾನಕ್ಕೆ ಉಸುರಿದೆ.
‘ಅವನ ಫೋಟೋ ಡೆಸ್ಕ್ ಟಾಪ್ ಅಲ್ಲಿಟ್ಟಿದ್ದೆ , ಈಗ ಕಾಣಿಸ್ತಿಲ್ಲ’ಅಂದೆ.
‘ಓ..ಅದಾ..ಸ್ಸಾ..ರೀ. ನಾನು ನಿನ್ನೆ ಅದನ್ನ ನೋಡಿದೆ, ನಿಂಗೆ ಬೇಡವೇನೋ ಅಂದ್ಕೊಂಡು ನಿನ್ನ ಕೇಳ್ದೇನೇ ರಿಸೈಕಲ್ ಬಿನ್ ಗೆ ಹಾಕ್ಬಿಟ್ಟೆ, ಅಲ್ಲೊಂದ್ಸಲ ಹುಡ್ಕು ಸಿಗ್ಬಹುದು’ ಅಂದ.
ಯಾಕೋ ಏನು ಮಾಡೋಕೆ ಹೋದ್ರೂ ಈಗೀಗ ಕೆಲಸಗಳ್ಯಾವುವೂ ಸುಸೂತ್ರವಾಗಿ ಸಾಗ್ತ ಇಲ್ಲ, ಬರೆಯೋಕೆ ಮನ್ಸಿಲ್ಲ, ಓದೋಕೆ ...ಓದೋಕೂ ಮನ್ಸಿಲ್ಲ.
‘ಸುಮ್ನೆ ಕೂತಿರ್ಬೇಕು ಅಂದ್ಕೊಂಡು ಕೂತ್ಕೊಳ್ಳೋಕೆ ಹದಿಮೂರುವರ್ಷದ ಹುಡುಗಿಗೆ ಸಿಗೋವಷ್ಟು ಟೈಮ್ ನಂಗೆ ಸಿಗತ್ತಾ? ಹದಿಮೂರನ್ನ ತಿರುಮುರುವಾಗಿಡೋಷ್ಟು ವಯಸ್ಸಾಗ್ತ ಬಂತು’ ಅಂತ ಯೋಚಿಸಿದವಳಿಗೆ ನಗು ಬಂತು ‘ವರ್ಷ ಎಷ್ಟೇ ಆದ್ರೂ ದಿನಕ್ಕಿರೋದು ಇಪ್ಪತ್ನಾಲ್ಕು ಗಂಟೆ ಮಾತ್ರ ಅಲ್ಲವಾ?’ ಅನ್ನಿಸಿ ತುಟಿಬದಿಗೆ ನಕ್ಕು ಸುಮ್ಮನಾದೆ.

ಯೋಚಿಸ್ತಿರೋವಾಗ್ಲೇ ಮತ್ತೆ ಕೇಳ್ದ ‘ಏನೇ.. ಯಾಕ್ ಹೀಗಿರ್ತೀಯಾ?’ ಅಂದ.
ಹೀಗೇ ಕೂತಿದ್ರೆ ಇವನಿನ್ನು ಸುಮ್ಮನಿರೋಲ್ಲ ಅಂತ ಗೊತ್ತಾಯ್ತು, ಆಗಿದ್ದಾಗ್ಲಿ, ಹೇಳಿಯೇಬಿಡೋಣ ಅಂದ್ಕೊಂಡು ಹೇಳ್ದೆ ‘ಅವನನ್ನ ಸೆಲೆಕ್ಟ್ ಮಾಡೋಕೆ ಟ್ರೈ ಮಾಡ್ತಿದ್ದೆ, ಆಗ್ಲಿಲ್ಲ ’ ಅಂದೆ ಸಣ್ಣ ಧ್ವನಿಯನ್ನ ಕಷ್ಟಪಟ್ಟು ಆಚೆತಂದ್ಕೊಂಡು. ಇವನೇನಂತಾನೋ ಅನ್ನೋ ಭಯ ಧ್ವನಿಯನ್ನ ಸುತ್ಕೊಂಡ ಹಾಗಿತ್ತು.
‘ಎಲ್ಲಿದಾನೆ ಅವನು?’ ಅಂತ ಕೆಳ್ದ.
‘ಇಲ್ಲೇ....ಸಿಕ್ದ, ನೋಡು’ ಅಂದೆ. ‘ಹಾಗಾದ್ರೆ...magic wand tool ತಗೊಂಡು ಅವನ ಸುತ್ತಲೂ ಒಂದು ಸುತ್ತು ಓಡಾಡ್ಸು, ಆಗ ನೋಡು, ಅವನನ್ನ ನೀನ್ ಸೆಲೆಕ್ಟ್ ಮಾಡ್ತೀಯೋ, ಅವನು ನಿನ್ನ ಸೆಲೆಕ್ಟ್ ಮಾಡ್ತಾನೋ ಗೊತಾಗತ್ತೆ..’ ಅಂತ ಹೇಳಿ ನಕ್ಕವನನ್ನೇ ನೋಡ್ತಾ ಇದ್ದೆ.
ನಂಗೂ ನಗು ಬಂತು ನಿಜವಾಗ್ಲೂ.... ಎಷ್ಟು ಒಳ್ಳೆಯವನು ಅಂತ ಮತ್ತೆ ಮತ್ತೆ ಅನ್ನಿಸಿಬಿಡೋದು ಇಂತ ಗಳಿಗೆಗಳಲ್ಲೇ.....

ಅವನ ಕೈ ಹಿಡ್ಕೊಂಡು ಮನೆಯಾಚೆ ಕರಕೊಂಡುಬಂದು ನಿಲ್ಲಿಸಿ ಆಗಸ ನೋಡ್ತಾ ಅಲ್ಲೇ ನಿಂತ್ಕೊಂಡೆ. ಮತ್ತೆ ಹೇಳ್ದೆ ಅವನ ಕಿವಿಯಲ್ಲಿ ‘ನಿನ್ನ ಸೆಲೆಕ್ಟ್ ಮಾಡಿದ್ದಾಯ್ತು, ನಿನ್ನಿಷ್ಟದ ನೀಲಿಯಲ್ಲಿ ಯಾವ ನೀಲಿಯನ್ನ background ಗೆ ಇಡಲಿ’ ಅಂತ ಕೇಳ್ದೆ. ಇಬ್ರೂ ಆಗಸ ನೋಡ್ತಾ ನಿಂತಿದ್ವಿ. ಆಗಸದಲ್ಲಿ ಆರು ಥರದ ನೀಲಿಗಳು ತೇಲಾಡ್ತಾ ಇದ್ರೆ... ಅವನಲ್ಲಿ ಮುಳುಗ್ತಾ ಇದ್ದ, ಇವನು ಮಸುಕಾಗಿ ನಿಂತಿದ್ದ. ದೂರದಲ್ಲಿ ಹಕ್ಕಿಗಳೆರಡು ಹಾರ್ತಾ ಇದ್ರೆ ರೆಕ್ಕೆಯಿಲ್ಲದೇ ನಾ ಇವನ ಜೊತೆ ಹಾರಡ್ತಾ ಇದ್ದೆ.

ಕುಂಚಕ್ಕೆ ಗೊತ್ತಿರುವುದಿಲ್ಲ ಹಿನ್ನೆಲೆಗೆ ಯಾವ ಬಣ್ಣ ಹೊಂದುತ್ತದೆಯಂತ, ಹಿನ್ನೆಲೆಯ ಬಣ್ಣವನ್ನೂ ನಾವೇ ಆರಿಸಿಕೊಂಡಿರಬೇಕು.

October 6, 2008

Miss you, happy journey ಕಣೋ...

ಜೋರುನಿದ್ರೆಯಲ್ಲಿದ್ದವಳಿಗೆ ಎಚ್ಚರವಾಯ್ತು. ಎದ್ದಾಗ ಇನ್ನೂ ಜ್ವರ ಇತ್ತು. ಯಾರೋ ತುಂಬ ಮಿಸ್ ಮಾಡ್ತಿದಾರೆ ಅನ್ನಿಸ್ತಾ ಇತ್ತು. ಅಮ್ಮಂಗೆ ಕಾಲ್ ಮಾಡೋಣ ಅಂತ ತಡಕಾಡಿ ಮೊಬೈಲ್ ಎತ್ಕೊಂಡೆ. ಏಳು ಮಿಸ್ಡ್ ಕಾಲ್ಸ್ ! ಒಂದು ವಾಯ್ಸ್ ಮೇಲ್ ಕೂಡ ಇತ್ತು. ವಾಯ್ಸ್ ಮೇಲ್ ತಮ್ಮನದಾಗಿತ್ತು ‘ಅಕ್ಕಾ, ಇವತ್ತು ದಿಢೀರ್ ಅಂತ ಹೊರಡೋದಾಯ್ತು, ಎಲ್ಲ ಫೋನ್ ಗಳನ್ನೂ ಡಿಸ್ ಕನೆಕ್ಟ್ ಮಾಡಿದ್ನಾದ್ರಿಂದ ನಿಂಗೆ ಕಾಲ್ ಮಾಡಕ್ಕಾಗ್ಲಿಲ್ಲ ಇವತ್ತು, ಈಗ ಏರ್ ಪೋರ್ಟ್ ಅಲ್ಲಿ ಇದೀನಿ, ಟೇಕ್ ಕೇರ್ ಅಕ್ಕಾ... ಬಾಯ್" ಅಂತ ಇತ್ತು. ನಾಲ್ಕು ತಿಂಗಳ ಹಿಂದೆ ಕಾರ್ಯನಿಮಿತ್ತ ಅಮೇರಿಕಾ ಬಂದಿದ್ದ ನನ್ನ ತಮ್ಮ ಇವತ್ತು ಕಾರ್ಯನಿಮಿತ್ತ ಭಾರತಕ್ಕೆ ತೆರಳಿದ್ದ. ವಾಯ್ಸ್ ಮೈಲ್ ಮಧ್ಯಾಹ್ನ ಹನ್ನೊಂದು ಗಂಟೆಗೇ ಇತ್ತು, ನಾನು ನೋಡಿದಾಗ ಸಂಜೆ ಐದು ಗಂಟೆ. ಇಷ್ಟಕ್ಕೆಲ್ಲ ಕಾರಣ ನನ್ನ ಮೊಬೈಲ್ ಸದಾ ಸೈಲಂಟ್ ಮೋಡ್ ಅಲ್ಲಿರೋದು ಅಂತನ್ನಿಸ್ತಿದೆ.
ನಿಜ, ನನ್ನನ್ನ ಯಾರೋ ತುಂಬ ಮಿಸ್ ಮಾಡ್ಕೊಳ್ತಿದಾರೆ....

October 2, 2008

ಹ್ಯಾಪಿ ಬರ್ಥ್ ಡೇ... ಬ್ಲಾಗ್ ಮರಿ...


ನಿಮ್ಮೆಲ್ಲರ ಮಡಿಲೊಳಾಡಿದ ಮುದ್ದು ಮರಿಯಿದು. ನಾ ಟೈಪಿಸಿದ ತೊದಲುಗಳನೆಲ್ಲ ಕಲಿತುಕೊಂಡು ನಿಮ್ಮೆಲ್ಲರ ಮುಂದಾಡುತ್ತ ವರ್ಷವುರುಳಿದ್ದನ್ನೇ ನಾನು ಮರೆಯುವಂತೆ ಮರೆಸಿದ ನನ್ನ ಬ್ಲಾಗ್ ಮರಿಯಿದು. ಇವತ್ತು ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಜಯಂತಿಯ ಘಮದ ನಡುವೆಯೇ ನನ್ನೀ ಬ್ಲಾಗ್ ಗೂ ವರುಷ ತುಂಬಿತು. ಇವತ್ತಿಲ್ಲಿ "ನೆನಪು ಕನಸುಗಳ ನಡುವೆ" ಎಂಬ ನನ್ನ ಪುಟಾಣಿ ಬ್ಲಾಗ್ ಮರಿಗೆ ಹುಟ್ಟಿದ ದಿನ. ಬ್ಲಾಗ್ ಮರಿಯನ್ನ ಎತ್ತಿ ಆಡಿಸಿ, ಆನಂದಿಸಿ, ಮುದ್ದಿಸಿ, ಗದರಿ ಅಳಿಸಿ, ನಗಿಸಿ ನಲಿಸಿದ ನಿಮ್ಮೆಲ್ಲರಿಗೂ ಬ್ಲಾಗ್ ಮರಿಯ ಹುಟ್ಟುಹಬ್ಬಕ್ಕೆ ಆಮಂತ್ರಣ ಕೋರುತ್ತಿದ್ದೇನೆ. ಇವತ್ತು ನನ್ನ ಬ್ಲಾಗ್ ಮರಿಯ ಹುಟ್ಟುಹಬ್ಬವನ್ನು ನಿಮ್ಮೆಲ್ಲರ ಸಮ್ಮುಖದಲ್ಲಿ ಆಚರಿಸೋಣ ಅಂತ ನಿಮ್ಮೆಲ್ಲರಿಗಾಗಿ ಕಾಯ್ತಾ ಇಲ್ಲೇ ಬ್ಲಾಗ್ ಮರಿಗೆ ಹೊಸ ಬಟ್ಟೆ ತೊಡಿಸಿ ನಿಮ್ಮೆಲ್ಲರ ಬರುವಿಕೆಯನ್ನೇ ಕಾಯ್ತಾ ನಾನೂ ಮತ್ತು ನನ್ನ ಬ್ಲಾಗ್ ಮರಿ ಇಬ್ಬರೂ ಕುಳಿತಿದ್ದೇವೆ. ನೀವೆಲ್ಲ ಬಂದಾದ ತಕ್ಷಣ ಕೇಕ್ ಕಟ್ ಮಾಡಲಿದ್ದೇವೆ..